Shree Maharaja Varaha Swamy Temple,
Maravanthe, Kundapura Tq.
ಶ್ರೀ ಮಹಾರಾಜ ವರಾಹ ಸ್ವಾಮೀ ದೇವಸ್ಥಾನ,
ಮರವಂತೆ, ಕುಂದಾಪುರ ತಾ||
Shree Varaha Swamy | Shree Mahavishnu | Shree Narasimha, Maravanthe |
ಕುಂದಾಪುರ ತಾಲೂಕಿನ ಮರವಂತೆ ಕಡಲ ತಟವು ಸುಂದರ ಪ್ರಕೃತಿ ತಾಣ. ಒಂದೆಡೆ ರಾಷ್ಟ್ರೀಯ
ಹೆದ್ದಾರಿಯ ಪಕ್ಕದಲ್ಲೇ ಬೋರ್ಗೆವ ಕಡಲು, ಮತ್ತೊಂದು ಮಗ್ಗುಲಲ್ಲಿ ಜುಳು-ಜುಳು ನಿನಾದಗೈವ ನದಿಯ ತೀರ.
ಒಟ್ಟಾರೆಯಾಗಿ ಪ್ರಕೃತಿಯ ರಮಣೀಯ ತಾಣವೆಂದರೆ ತಪ್ಪಾಗಲಾರದು. ಇಂಥಹ ಸುಂದರ ಭೂದೇವಿಯ ವೈಶಿಷ್ಟ್ಯಗಳ
ನಡುವೆ ನೆಲೆಸಿ ನಿಂತಿರುವ ಮರವಂತೆಯ(Maravanthe) ಆರಾಧ್ಯ ದೇವರೆ ಶ್ರೀ ಮಹಾರಾಜ ವರಾಹ ಸ್ವಾಮಿ(Shree Maharaja Varaha Swamy) ಇಲ್ಲಿ ಶ್ರೀ ಮಹಾವಿಷ್ಣು
ತನ್ನ ಮೂರು ರೂಪಗಳಲ್ಲಿ ನೆಲೆಸಿ, ತ್ರಿಕೂಟಾಚಲ ಎನ್ನುವ ದೇವಭೂಮಿಯನ್ನು ನಿರ್ಮಾಣ ಮಾಡಿದ್ದಾನೆ.
ಇಲ್ಲಿನ ಕ್ಷೇತ್ರ
ಪುರಾಣವನ್ನು ವಿಶ್ಲೇಷಿಸಿದಾಗ ಹಿಂದೆ ಇಲ್ಲಿ ಇಂದ್ರನು ಗೌತಮ ಮುನಿಯ ಪತ್ನಿಯಲ್ಲಿ ಮೋಹಗೊಂಡು, ಅವಳನ್ನು
ಮೋಸದಿಂದ ಮೋಹಿಸಿ ಗೌತಮ ಮುನಿತ ಶಾಪಕ್ಕೆ ಗುರಿಯಾಗಿ, ಶ್ರೀ ಮೂಕಾಂಬಿಕಾ ದೇವಿಯ ಪದತಲದಿಂದ ಹರಿಯುವ
ಸೌಪರ್ಣಿಕೆಯ ತೀರದಲ್ಲಿ ವಾಸಿಸುತ್ತಾನೆ. ಶಾಪವಿಮೋಚನ ತರುವಾಯ ದೇವೇಂದ್ರನು ಬ್ರಹಸ್ಪತಿ ಆಚಾರ್ಯರ
ಮಖೇನ ಮರವಂತೆಯ ತೀರದಲ್ಲಿ ಒಂದು ಲಿಂಗವನ್ನು ಪ್ರತಿಷ್ಠಾಪನೆ ಮಾಡುತ್ತಾನೆ. ಸುರೇಂದ್ರನಿಂದ ಸ್ಥಾಪಿತವಾದ
ಲಿಂಗವೇ ಮರವಂತೆಯ ಶ್ರೀ ಗಂಗಾಧರೇಶ್ವರ (Maravanthe
Shree Gangadareshwara temple)ದೇವಸ್ಥಾನವಾಗಿದೆ.
Shree Varaha Swamy Temple, Maravanthe |
ಹೀಗೆ ಓರ್ವ ಕ್ಷಾತ್ರ
ವಂಶಸ್ಥನಾದ ರಾಜನು ತನ್ನ ವಿಚಾರ ಹೀನತೆಯಿಂದ ಪಯಸ್ವಿನಿ ನದಿಯ ತೀರದಲ್ಲಿ ತನ್ನ ಪುತ್ರ ಹತ್ಯೆಯ ನಿಮಿತ್ತ
ಪ್ರಾಯಶ್ಚಿತ ಕರ್ಮಗಳಿಗಾಗಿ ವಿವಿಧ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಿ, ಗೋಕರ್ಣದಲ್ಲಿ ವಿಶ್ರಾಂತಿ
ಪಡೆದಿರಯವ ವೇಳೆಯಲ್ಲಿ ತನ್ನ ಸ್ವಪ್ನದಲ್ಲಿ ಒಂದು ದೇವವಾಣಿ ಕೇಳಿಸುತ್ತದೆ. ಅದರಂತೆ ನದಿ-ಸಮುದ್ರ
ಸಂಗಮದಲ್ಲಿ ಶ್ರೀ ಗಂಗಾಧರೇಶ್ವರ ದೇವಸ್ಥಾನವಿದೆ. ಆ ದೇವಾಲಯದ ದಕ್ಷಿಣಕ್ಕೆ ನೀನು ಶ್ರೀ ವಾರಾಹ, ವಿಷ್ಣು ಹಾಗೂ ನರಸಿಂಹ ದೇವರ ಮೂರ್ತಿಗಳನ್ನು
ವಿಧಿಪೂರ್ವಕವಾಗಿ ಪ್ರತಿಷ್ಠಾಪಿಸು ಎಂದು ಅಪ್ಪಣೆಯಾಗುತ್ತದೆ. ಅಂತೆಯೇ ಆ ಕ್ಷಾತ್ರ ರಾಜನಿಂದ ನಿರ್ಮಾಣಗೊಂಡ
ಭವ್ಯ ಮಂದಿರವೇ ಮರವಂತೆಯ ಶ್ರೀ ಮಹಾರಾಜ ವರಾಹಾ ಸ್ವಾಮಿ ದೇವಸ್ಥಾನವಾಗಿದೆ.
ನಮ್ಮ ಪವಿತ್ರ ಭರತಖಂಡದ
ಸಪ್ತ ವರಾಹ ದೇವಸ್ಥಾನಗಳಲ್ಲಿ ಮರವಂತೆಯ ಶ್ರೀ ಮಹಾರಾಜ ವರಾಹಾ ಸ್ವಾಮಿ ದೇವಸ್ಥಾನ ಕೂಡಾ ಒಂದಾಗಿದೆ.
ಇಲ್ಲಿ ಶ್ರೀ ಸ್ವಾಮಿಗೆ ಮುಖ್ಯವಾಗಿ 'ಅಭಾರಿಸೇವೆ'
ಯನ್ನು ಭಕ್ತರು ಧನ್ಯತೆಯಿಂದ ಅರ್ಪಣೆ ಮಾಡುತ್ತಾರೆ. ಸಕಲ ಜಯದ ಧ್ಯೋತಕ, ಹಾಗೂ ಸಮೃದ್ಧಿಯ ಪ್ರತೀಕ
ದೇವರನ್ನು ಬೇಡಿಕೊಂಡು ದೇವರಿಗೆ ಈ ಸೇವೆ ನಡೆಸಲಾಗುತ್ತದೆ. ಈ ಸೇವೆಯು ಪ್ರತೀ ಮೂರು ಸಂವತ್ಸರಗಳಿಗೊಮ್ಮೆ
ನಡೆಯುವುದಾಗಿದ್ದು, ಅಂದು ನಾಲ್ಕು ಕಳಸಿನ ಅಕ್ಕಿಯ ಅನ್ನವನ್ನು ನಿಗಳ(ಮೊಸಳೆ)ನಿಗೆ ನೈವೇಧ್ಯ ನೀಡಲಾಗುತ್ತದೆ. ಈಗಲೂ ಇಲ್ಲಿ ಮೊಸಳೆ ಬಂದು ನೈವೇಧ್ಯವನ್ನು
ಸ್ವೀಕಾರ ಮಾಡುತ್ತದೆ ಎಂಬುದು ಇಲ್ಲಿನ ಭಕ್ತರಿಂದ ಬರುವಂತ ಮಾತಾಗಿದೆ. ದೇವಳದ ಮುಂಬಾಗದಲ್ಲೆ ನೇರವಾಗಿ
ನದಿಗೆ ಇಳಿಯಲು ಒಂದು ಮೆಟ್ಟಿಲಿನ ವ್ಯವಸ್ಥೆ ಇದ್ದು, ಅಲ್ಲಿಯೇ ನೈವೈಧ್ಯ ಸಮರ್ಪಣೆ ನಡೆಯುತ್ತದೆ.
ಇಲ್ಲಿ ಪ್ರತೀ ವರ್ಷ
ಕರ್ಕಾಟಕ ಅಮಾವಾಸ್ಯೆ(Karkataka Amavase)ಯ
ದಿನದಂದು ವಿಜೃಂಭಣೆಯ ಜಾತ್ರೋತ್ಸವ ನಡೆಯುತ್ತದೆ. ಅಂದು ಸಾವಿರಾರು ಜನ ಭಕ್ತರು ಶ್ರೀ ದೇವರ ದರ್ಶನ
ಪಡೆದು ಕೃತಾರ್ಥರಾಗುತ್ತಾರೆ. ಇಲ್ಲಿ ಹೆಚ್ಚಾಗಿ ಮೀನುಗಾರರು ಆಗಮಿಸುತ್ತಾರೆ. ಕಾರಣ ಶ್ರೀ ಸ್ವಾಮೀಯು
ಮೀನುಗಾರರ ಆರಾದೈವವಾಗಿದ್ದಾನೆ, ಅಂದರೆ ಸಕಾಲದಲ್ಲಿ ಮತ್ಸವನ್ನು ಹೇರಳವಾಗಿ ಒದಗಿಸಿ, ಧನಾಧಿಗಳಾರ್ಜನೆಗೆ
ದಾರಿ ಮಾಡಿಕೊಡುತ್ತಾನೆ ಎಂಬುದು ಭಕ್ತರ ಬಲವಾದ ನಂಬಿಕೆ. ಅಂತೆಯೇ ನಡೆದ ಹಲವಾರು ಘಟನೆಗಳೂ ಕೂಡಾ ನಮಗೆ
ಇಲ್ಲಿ ಕಾಣಸಿಗುತ್ತದೆ. ಈ ಜಾತ್ರಾ ಸಂದರ್ಭದಲ್ಲಿ ಸಮುದ್ರ ಸ್ನಾನ ಮಾಡಿ, ಇಲ್ಲಿನ ದೇವರನ್ನು ದರ್ಶನ
ಮಾಡಿದರೆ ಸಕಲ ಪಾಪಗಳೂ ನಾಶವಾಗುತ್ತದೆ ಎಂಬ ನಂಬಿಕೆ ಇದೆ. ಅಂದು ಆಲೇ ಮರದ ಕೆತ್ತೆಯಿಂದ ಮಾಡಿದ ಕಹಿಯಾದ
ಕಷಾಯವನ್ನು ಕುಡಿಯುವ ಕ್ರಮವಿದೆ.
ಜಗದೋದ್ಧಾರ ಶ್ರೀ
ಮಹಾವಿಷ್ಣುವಿನ ಮಾಯೇ ಬಲ್ಲವರಾರು, ಶ್ರೀ ಸ್ವಾಮಿಯು ಲೋಕೊದ್ಧಾರಕ್ಕಾಗಿ ಹಲವಾರು ಅವತಾರವೆತ್ತಿ ಬಂದಿದ್ದು,
ಅವನ ಮೂರು ರೂಪಗಳನ್ನು ಒಮ್ಮೆಗೆ ಕಾಣುವ ಭಾಗ್ಯ ಯಾರಿಗೇ ತಾನೇ ಲಭ್ಯವು. ದೇವಾಲಯವು ಸುಂದರವಾಗಿ ನಿರ್ಮಾಣಗೊಂಡಿದ್ದು
ಸಮುದ್ರ ಕಿನಾರೆಯ ಸಮೀಪ ಹೆದ್ದಾರಿಯಲ್ಲೇ ದೇವಳದ ಮುಖಮಂಟಪ ನಮಗೆ ಕಾಣಸಿಗುತ್ತದೆ. ಶ್ರೀ ದೇವರಿಗೆ
ಸದ್ಭಕ್ತ ಮೀನುಗಾರರ ಸಂಘದ ವತಿಯವರು ಸುಂದರವಾದ ಸ್ವರ್ಣಮುಖವಾಡ ಮಾಡಿಸಿಕೊಟ್ಟಿದ್ದಾರೆ. ಇಲ್ಲೇ ಪಕ್ಕದಲ್ಲೇ
ಶ್ರೀ ಗಂಗಾಧರೇಶ್ವರನ ಮಂದಿರ ಕೂಡಾ ಇದೆ. ಭಕ್ತಾಭಿಮಾನಿಗಳು, ಶ್ರೀ ವರಾಹನೊಂದಿಗೆ, ಸದಾಶಿವನಾದ ಶ್ರೀ
ಗಂಗಾಧರನ ದರ್ಶನಗೈದು ಪುಣ್ಯಾರ್ಜನೆಯನ್ನು ಮಾಡಿಕೊಂಡು, ದೇವರ ಕೃಪೆಗೆ ಪಾತ್ರರಾಗಿ.
ವಿಳಾಸ
:-
ಶ್ರೀ ಮಹಾರಾಜ ವರಾಹ
ಸ್ವಾಮೀ ದೇವಸ್ಥಾನ,
ಮರವಂತೆ, ಕುಂದಾಪುರ
ತಾಲೂಕು |
ದಾರಿಯ ವಿವರ : ಕುಂದಾಪುರ ನಗರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂದಾಪುರ-ಬೈಂದೂರು ಮಾರ್ಗವಾಗಿ ಸಾಗುವಾಗ ಕುಂದಾಪುರದಿಂದ ಸರಿಸುಮಾರು 12-13ಕಿ.ಮೀ ಅಂತರದಲ್ಲಿ, ಸಮುದ್ರ ತಟದಲ್ಲಿ ಶ್ರೀ ಸ್ವಾಮೀಯ ಮಂದಿರವಿದೆ. ಕಡಲತಡಿಯಲ್ಲೇ ಶ್ರೀ ದೇವರ ಸ್ವಾಗತ ಕಮಾನು ಗೋಚರಿಸುತ್ತದೆ.
ಹೆಚ್ಚಿನ
ಮಾಹಿತಿಗಾಗಿ :-
·
ದೇವಳದ ದೂರವಾಣಿ : 08254-255555