Kapu Shree Mariyamma Temple(3 Temple)
ಕಾಪು ಶ್ರೀ ಮಾರಿಯಮ್ಮ ದೇವಸ್ಥಾನಗಳು, ಕಾಪು-ಉಡುಪಿ ಜಿಲ್ಲೆ||
![]() |
1. Hale Mariyaam | 2. Hosa Mariyamma | 3. Kalya Mariyamma |
ಉಡುಪಿ ಜಿಲ್ಲೆಯ
ಮಾರಿಯಮ್ಮನ(Kapu Mariyamma) ದೇವಸ್ಥಾನಗಳಲ್ಲಿ ಅಗ್ರ ಪಂಕ್ತಿಯಲ್ಲಿ ಇರುವ ಮಾರಿಗುಡಿಗಳಲ್ಲಿ ಕಾಪುವಿನ
ಮಾಡಿಗುಡಿಗಳು ಅತ್ಯಂತ ಮಹತ್ವಪೂರ್ಣವಾಗಿರುವ ದೇವಾಲಯಗಳಾಗಿ ಕಂಡುಬರುತ್ತದೆ. ಈ ನಾಡು ಪುರಾಣ ಕಾಲದಿಂದಲೂ
“ಹೂವಿನ ಹಿತ್ತಿಲು” ಎಂದೇ ಖ್ಯಾತಿಯನ್ನು ಪಡೆದಿರುವ
ಕಾಪು ಸಾವಿರ ಸೀಮೆಯ ಒಡತಿ ಗದ್ದುಗೆಯನ್ನೇರಿ ಶರಣು ಬಂದ ಭಕ್ತರನ್ನು ತಥಾಸ್ತು ಎಂದು ಸದಾ ಹರಸುತ್ತಿರುವ
ಶ್ರೀ ಮಾರಿಯಮ್ಮ ದೇವಿ. ಇಲ್ಲಿ ಸೈಂದವ – ವೈದಿಕ ಸಂಸ್ಕೃತಿಗಳ ಸಮನ್ವಯವಾದ ಭಾರತೀಯ ಸಂಸ್ಕೃತಿಯ ಉಸಿರು
ಜಾನಪದ ಮನೋಧರ್ಮ ಸಾನ್ನಿಧ್ಯವಿದೆ ಎಂದು ಪೂಜೆ ನಡೆಯುವುದಲ್ಲ, ಪೂಜೆ ನಡೆದಾಗ ಸಾನ್ನಿಧ್ಯವೊದಗುವುದೆಂಬುದು
ಜಾನಪದ ನಂಬಿಕೆ. ಈ ಶ್ರದ್ಧೆಯ ಆಧಾರದಲ್ಲಿ ನಮ್ಮ ಧಾರ್ಮಿಕ ಆಚರಣೆ,ವಿಧಿ, ಕಟ್ಟಳೆಗಳು ಶತಮಾನಗಳಿಂದ
ಸಾಗಿ ಬಂದು ಇಂದು ನಾವು ಕಾಣುವ ಸ್ವರೂಪದಲ್ಲಿದೆ, ಹಲವು ರೂಪಾಂತರಗಳನ್ನು ಹೊಂದಿದ್ದರೂ ಮೂಲವನ್ನು
ಸುಪ್ತವಾಗಿ ತನ್ನಲ್ಲಿ ಬಚ್ಚಿಟ್ಟುಕೊಂಡಿವೆ.

ಹೀಗೆ ಶ್ರೀ ಮಾರಿಯಮ್ಮ ದೇವಿಯು ಇಲ್ಲಿಗೆ ಹೇಗೆ ಬಂದಳು ಎಂಬ
ಹಿನ್ನಲೆಯನ್ನು ಅರಸುತ್ತಾ ಸಾಗುವಾಗ ನಮ್ಮ ಮುಂದೆ ತೆರೆದುಕೊಳ್ಳುವ ಇತಿಹಾಸದ ಪುಟಗಳ ಮಾಲೆ. ಅಮ್ಮನವರು(Ammanavaru)
ಕೆಳದಿಯ ನಾಯಕರ ಕಾಲಾವಧಿಯಲ್ಲಿ ಅವರ ಮೂಲಕ ಮಾರಿಯು ತುಳುನಾಡಿನ ಕಾಪು ಸೀಮೆಗೆ ಬಂದಳೆಂದು ಹೇಳಲಾಗುತ್ತದೆ.
ಸರಿಸುಮಾರು ಕ್ರಿ.ಶ-1743ರಲ್ಲಿ ಬಸಪ್ಪ ನಾಯಕ
ಕಾಪುವಿನ ಸಮುದ್ರ ತೀರದಲ್ಲಿ 'ಮನೋಹರಗಢ' ಎಂಬ
ಸಣ್ಣ ಕೋಟೆಯನ್ನು, ಮಲ್ಲಾರಿನಲ್ಲಿ ಸೈನ್ಯ ನಿಲ್ಲಲು ಒಂದು ಕೋಟೆಯನ್ನು ನಿರ್ಮಿಸಿದನೆಂದು ದಾಖಲೆಗಳು
ಸ್ಪಷ್ಟಪಡಿಸುತ್ತದೆ. ಅಂದು ನಿರ್ಮಾಣಗೊಂಡ ಕೋಟೆ ಇಂದಿಗೂ ದೇವಿಯ ಮೂಲ ಸಾನ್ನಿಧ್ಯವಾದ 'ಕೋಟೆಮನೆ'
ಯ ಸಮೀಪದಲ್ಲಿ ಕಾಣಬಹುದಾಗಿದೆ. ದೇವಿ ದಂಡಿನಮಾರಿಯಾಗಿ ಆಗಮಿಸಿ ಕಾಪುವನ್ನು ಕಾಯುವ ಮಾರಿಯಮ್ಮನೆ ಆಗಿ
ನೆಲೆಸಿನಿಂದಿದ್ದಾಳೆ.

ಹೀಗೆ ಇಲ್ಲಿ
ಮೂರು ಮಾಡಿಗುಡಿಗಳಿದ್ದು ಅದನ್ನು ಕ್ರಮವಾಗಿ ಹಳೇ ಮಾರಿಗುಡಿ, ಹೊಸಮಾರಿಗುಡಿ(ಮದ್ಯ), ಮೂರನೇ ಮಾರಿಗುಡಿ(ಕಲ್ಯ) ಎಂದು ಕರೆಯಲಾಗುತ್ತದೆ.
ಮೂಲದಲ್ಲಿ ಹಳೇ ಮಾಡಿಗುಡಿ ಮಾತ್ರ ಇದ್ದು ಕಾಲಕ್ರಮೇಣ ಭಕ್ತರ ನಡುವಿನ ಭಿನ್ನಾಭಿಪ್ರಾಯಗಳಿಂದ ಮೂರು
ಮಾಡಿಗುಡಿಗಳು ನಿರ್ಮಾಣವಾದವು. ಶಿರಸಿ ಮಾರಿಕಾಂಬೆಯನ್ನು ಬಿಟ್ಟರೆ ಕಾಪುವಿನ ಮಾರಿಯಮ್ಮನೇ ಅತ್ಯಂತ
ಪ್ರಸಿದ್ಧಿಯನ್ನು ಹೊಂದಿದ ಮಾರಿಯಾಗಿದ್ದಾಳೆ. ಕಾಪು
ಮಾರಿಪೂಜೆಯ ಸಂಧರ್ಭ ಸಾವಿರಾರು ಕೋಳಿಗಳನ್ನು ದೇವಿಗೆ ಅರ್ಪಿಸಲಾಗುತ್ತದೆ. ಅಂದು ಪ್ರತಿಯೊಬ್ಬರ ಮನೆಯಲ್ಲಿಯೂ
'ಕೋರಿರೊಟ್ಟಿ' ಎಂಬ ತುಳುಸೀಮೆಯ ವಿಶೇಷ ಅಡುಗೆ.
ಇಂದು ಮೂರು ದಿಕ್ಕಿನಲ್ಲಿ ಮೂರು ಮಾರಿಗುಡಿಗಳು ಕಾಪು ನಗರದ ಮೂರು ಕಣ್ಣುಗಳಂತೆ ಇದೆ. ಶಕ್ತಿದೇವತೆ
ಮಾರಿಯಮ್ಮ ಕಾಪಾಡುವ ದೇವತೆಯಾದ್ದಾರಿಂದ ಈ ಊರಿಗೆ 'ಕಾಪು(KAPU)'
ಎಂದಾಯಿತು ಎಂದು ಹಿರಿಯರು ಅಭಿಪ್ರಾಯ ಪಡುತ್ತಾರೆ. ಇಲ್ಲಿ ದೇವಿಯ ಮಂದಿರವು ವಾರದಲ್ಲಿ ಒಂದು ದಿನ
ಮಾತ್ರ ವಿಶೇಷ ಪೂಜೆಯೊಂದಿಗೆ ತೆರೆಯಲ್ಪಟ್ಟು, ಭಕ್ತಾದಿಗಳಿಗೆ ಮುಕ್ತವಾಗಿರುತ್ತದೆ. ಮಂಗಳವಾರ ಮತ್ತು
ಬುಧವಾರ ದೇವಿಯ ಮಂದಿರದಲ್ಲಿ ವಿಶೇಷ ಪೂಜಾದಿಗಳು ಮಾರಿಯಮ್ಮನಿಗೆ ವಿನಿಯೋಗವಾಗುತ್ತದೆ. ದೇವಿಯ ಗದ್ದುಗೆಯಲ್ಲಿ
ಪ್ರತಿ ವಾರವೂ ಒಂದು 'ಹಂಗಾರ' ಮರರಿಂದ ನಿರ್ಮಿಸಿದ
ಬೊಂಬೆಯನ್ನು ಇರಿಸಿ, ಅದನ್ನು ಅಲಂಕರಿಸಲಾಗುತ್ತದೆ. ತದನಂತರ ಪೂಜಾದಿಗಳು ಮುಗಿದ ಬಳಿಗೆ ದೇವಿಯ ಆವೇಶಭರಿತ
ವ್ಯಕ್ತಿ ಮತ್ತು ಅವರ ಸಂಗಡಿಗರು ಆ ಬೊಂಬೆಯನ್ನು ನಡೆದುಕೊಂಡು ಕಳತ್ತೂರಿನ ಒಂದು ಬಾವಿಯಲ್ಲಿ ವಿಸರ್ಜನೆ
ಮಾಡುತ್ತಾರೆ. ಇನ್ನೊಂದು ಐತಿಹ್ಯದ ಪ್ರಕಾರ ದೇವಿಯು ಒಂದು ತೆಂಗಿನ ಕಾಯಿಯನ್ನ ದೂರಕ್ಕೆ ಎಸೆದಳಂತೆ,
ಆ ಕಾಯಿಯು ಮೂರು ತುಂಡಾಗಿ ಮೂರು ಕಡೆಯಲ್ಲಿ ಬಿದ್ದು, ಅಲ್ಲಿಯೇ ಮೂರು ಮಾರಿಗುಡಿ ನಿರ್ಮಾಣವಾಯಿತು
ಎಂಬುದು ಹಿರಿಕರ ನಂಬಿಕೆಯಾಗಿದೆ.
ಹೀಗೆ ಭಕ್ತರನ್ನು ಸಲಹುತ್ತಾ, ನಂಬಿಕೆಗೆ ಇಂಬಾಗಿ ಮುನ್ನೆಡೆಸುತ್ತಿರುವ
ಮಾರಿಯಮ್ಮನನ್ನು ಒಮ್ಮೆಯಾದರೂ ಕಂಡು ಪುನೀತರಾಗಿ. ಮೂರು ಮಾರಿಗುಡಿಯಲ್ಲಿರುವ ದೇವಿಯ ಬಿಂಬದಲ್ಲೂ ಒಂದೊಂದು
ರೀತಿಯ ಮುಖಭಾವವನ್ನು ನಾವು ಕಾಣಬಹುದು. ಹಳೆಮಾರಿಯಮ್ಮ ಲಕ್ಷ್ಮೀ ಸ್ವರೂಪದಲ್ಲೂ, ಮದ್ಯಮಾರಿಯಮ್ಮ ಪಾರ್ವತೀ
ರೂಪದಲ್ಲೂ, ಕಲ್ಯಮಾರಿಯಮ್ಮ ಸರಸ್ವತೀ ರೂಪದಲ್ಲೂ ಕಂಗೊಳಿಸುತ್ತಾಳೆ. ಅಂದು ದಂಡಿನೊಂದಿಗೆ ಬಂದು, ಕಾಪು
ಸೀಮೆಯ ತಾಯಿಯಾಗಿ ಕಾಪಾಡುವ ಕಾಪು ಮಾರಿಯಮ್ಮನಿಗೆ ಜಯಕಾರ. ಸರ್ವರಿಗೂ ಶ್ರೀ ಮಾರಿಯಮ್ಮ ಅನುಗ್ರಹಿಸಲಿ.
ವಿಳಾಸ
:-
ಶ್ರೀ ಮಾರಿಯಮ್ಮ ದೇವಸ್ಥಾನಗಳು,(1,2,3)
ಕಾಪು, ಉಡುಪಿ ತಾ&ಜಿ ||
ದಾರಿಯ
ವಿವರ :
ಉಡುಪಿಯ ಮೂಲಕ ಮಂಗಳೂರು ಮಾರ್ಗವಾಗಿ ಸಾಗುವಾಗ ಶ್ರೀ ಮಾರಿಯಮ್ಮನ ಗುಡಿ ಕಾಪು ನಗರದ ಮಧ್ಯದಲ್ಲಿಯೇ
ನಮಗೆ ಕಂಡು ಬರುತ್ತದೆ. ಹೊಸ ಮಾರಿಗುಡಿ ನಗರಕ್ಕೆ ತಾಗಿಕೊಂಡಿದ್ದು, ಹಳೆ ಮಾರಿಗುಡಿ ಸ್ವಲ್ಪ ಒಳಗಡೆ
ಇದೆ. ಕಲ್ಯ ಮಾರಿಗುಡಿ ಕೂಡಾ ನಗರಕ್ಕೆ ತಾಗಿಕೊಂಡಿದ್ದು ರಸ್ತೆಯ ಪಕ್ಕದಲ್ಲೆ ದೇವಾಲಯದ ಗೋಪುರ ನಮಗೆ
ಕಾಣಿಸುತ್ತದೆ.